ಪಾರಂಪರಿಕ ತಿಳಿವಳಿಕೆಯ ಆಕರಗಳು
ನಂದಿ ಛಂದೋರ್ಣವ
  1. ಕೃತಿಯ ಹೆಸರು: ನಂದಿ ಛಂದೋರ್ಣವ
  2. ಲೇಖಕ: ವೀರಭದ್ರ
  3. ಕಾಲ: 19 ನೆಯ ಶತಮಾನ (ಕ್ರಿ.ಶ. 1846)
  4. ವಸ್ತು: ಛಂದಶ್ಶಾಸ್ತ್ರ
  5. ಕಿರು ಪರಿಚಯ: ನಂದಿ ಛಂದೋರ್ಣವವು ಛಂದಸ್ಸನ್ನು ಕುರಿತ ಚಿಕ್ಕ ಪುಸ್ತಕ. ಿದನ್ನು ಬರೆದವನು ಕನ್ನಡ ಮತ್ತು ತೆಲುಗು ಭಾಷೆಗಳೆರಡರಲ್ಲೂ ಪರಿಣಿತನಾಗಿದ್ದ ವೀರಭದ್ರನೆಂಬ ವಿದ್ವಾಂಸ. ಅವನು ಪುಸ್ತಕದ ಶೀರ್ಷಿಕೆಯಲ್ಲಿ ತನ್ನ ಗುರುವಾದ ನಂದಿ ಎನ್ನುವವನ ಹೆಸರನ್ನೂ ಸೇರಿಸಿದ್ದಾನೆ. ಅವನ ಪೂರ್ವಜರು ದಕ್ಷಿಣ ಕರ್ನಾಟಕದ ದರೂರು ಮತ್ತು ವಿಡಪಲೂರು ಎಂಬ ಹಳ್ಳಿಗಳಲ್ಲಿ ನೆಲೆಸಿದ್ದರು. ಈ ವೀರಶೈವ ವಿದ್ವಾಂಸನು, ಈಶ್ವರಕವಿಯ ಕವಿಜಿಹ್ವಾಬಂಧನವೆಂಬ ಗ್ರಂಥದಿಂದ ಅನೇಕ ವಿಚಾರಗಳನ್ನು ತೆಗೆದುಕೊಂಡಿದ್ದಾನೆ. ಈ ಪುಸ್ತಕದಲ್ಲಿ 191 ಪದ್ಯಗಳನ್ನು ಒಳಗೊಂಡಿರುವ ಮೂರು ಆಧ್ಯಾಯಗಳಿವೆ. ಅನೇಕ ಪದ್ಯಗಳು ತಾವು ವಿವರಿಸುತ್ತಿರುವ ಛಂದೋರೂಪದಲ್ಲಿಯೇ ರಚಿತವಾಗಿವೆ. ಹೀಗೆ ಆಗುವುದನ್ನು ಲಕ್ಷ್ಯ-ಲಕ್ಷಣ ಸಮನ್ವಯವೆಂದು ಕರೆಯುತ್ತಾರೆ. ಉದಾಹರಣೆಗೆ ಭಾಮಿನೀ ಷಟ್ಪದಿಯ ಲಕ್ಷಣವನ್ನು ಹೇಳುವ ಪದ್ಯವು ಆ ಷಟ್ಪದಿಯಲ್ಲಿಯೇ ಇರುತ್ತದೆ. ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಯಾವುದೇ ಪುಸ್ತಕದಲ್ಲಿ ಹೇಳಲಾಗುವ ವಿಷಯಗಳ ಜೊತೆಗೆ ತೆಲುಗು ಛಂದಸ್ಸಿಗೆ ಸಂಬಂಧಿಸಿದ ಸಂಗತಿಗಳನ್ನು ಹೇಳಿರುವುದು ಈ ಕೃತಿಯ ವಿಶೇಷ. ತೇಟಗೀತಿ, ವಡಿಸೀಸ, ಮತ್ತು ಆಟವಲದಿಗಳನ್ನು ಕುರಿತಂತೆ ಇಲ್ಲಿ ಮಾಹಿತಿಗಳಿವೆ. ಇವು ದ್ರಾವಿಡ ಮೂಲದಿಂದ ಬಂದಿರುವ ರೂಪಗಳಾಗಿರುವುದರಿಂದ ಇವುಗಳಿಗೆ ವಿಶೇಷ ಮಹತ್ವವಿದೆ. ಉಳಿದವರಂತೆ ವೀರಭದ್ರನೂ ಕೂಡ ಛಂದೋರೂಪಗಳಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಚಿಹ್ನೆಗಳನ್ನೂ ಗುಣಗಳನ್ನೂ ಜೋಡಿಸುತ್ತಾನೆ. ಆ ಪರಂಪರೆಯನ್ನು ಮುಂದುವರಿಸುವುದರ ಸಂಗಡ ಕನ್ನಡಕ್ಕೂ ಮೂಲ ದ್ರಾವಿಡ ಛಂದೋರೂಪಗಳಿಗೂ ಇರುವ ಸಂಬಂಧಗಳನ್ನು ಕಂಡುಕೊಳ್ಳಲು ನೆರವಾಗಬಹುದಾದ ಮಾಹಿತಿಗಳನ್ನು ಕೊಟ್ಟಿದ್ದಾನೆ.

 

  1. ಪ್ರಕಟಣೆಯ ಇತಿಹಾಸ:

ಅ. 1909, ಸಂ. ಎಂ.ಎ. ರಾಮಾನುಜ ಅಯ್ಯಂಗಾರ್, ಕಾವ್ಯಕಲಾನಿಧಿ ಗ್ರಂಥಮಾಲೆ, ಮೈಸೂರು,

ಆ. 1974, ಕನ್ನಡ ಛಂದಃಸಂಪುಟ, ಸಂ. ಎಲ್. ಬಸವರಾಜು, ಗೀತಾ ಬುಕ್ ಹೌಸ್, ಮೈಸೂರು

 

7. ಪರಾಮರ್ಶನ ಗ್ರಂಥಗಳು:

 

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು